ಜಯ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ - ಹಳತು ಹೊನ್ನು


ಈ ಚಿತ್ರವನ್ನು ಇಳಿಸಲಾಗುತ್ತಿಲ್ಲ. ದಯವಿಟ್ಟು ಪುಟವನ್ನು ಮರುಲೋಡ್ (Ctrl+F5) ಮಾಡಿ - ಹಳತು ಹೊನ್ನು.

"ಅರೆರೆ, ಇದೇನಿದು ಕನ್ನಡ ರಾಜ್ಯೋತ್ಸವಕ್ಕೆ ಕರ್ನಾಟಕದ ಧ್ವಜದ ಬದಲು ಮರೆತು ಭಾರತದ ಧ್ವಜ ಬಳಸಿದ್ದಾರಲ್ಲ!" ಎಂದು ಆಶ್ಚರ್ಯ ಪಡಬೇಡಿ. ಏಕೆಂದರೆ, ನಾವು ಬೇಕಂತಲೇ ಇಂದು ಭಾರತದ ಧ್ವಜವನ್ನು ಬಳಸುತ್ತಿದ್ದೇವೆ. ಇದಕ್ಕೆ ಮುಖ್ಯ/ಇತ್ತೀಚಿನ ಕಾರಣವೆಂದರೆ ಕಳೆದ ರಾಜ್ಯ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಎನ್ನುವ ರಾಜಕೀಯ ಪಕ್ಷ ಮೊದ-ಮೊದಲು ಹಿಂದೂಗಳನ್ನು ಒಡೆದು ಲಿಂಗಾಯತರನ್ನು ಹಿಂದೂ ಕುಟುಂಬದಿಂದ ಬೇರ್ಪಡಿಸಿ ತಮ್ಮ ರಾಜಕೀಯದ ಬೇಳೆ ಬೇಯಿಸಿಕೊಳ್ಳಲು ನೋಡಿತು. ಯಾವಾಗ ಹಿಂದೂಗಳು ಒಗ್ಗಟ್ಟಾಗಿ ನಿಂತು ಒಡೆಯಲು ಬಂದ ಕಾಂಗ್ರೆಸ್ಸಿಗರಿಗೆ ಸರಿಯಾದ ಪಾಠ ಕಲಿಸಿದರೋ ಆಗ ಆ ಪಕ್ಷ ತನ್ನ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಆರಿಸಿದ ಮಾರ್ಗವೆಂದರೆ ಕನ್ನಡಿಗರಿಗೆ ತಮ್ಮ ರಾಜ್ಯ-ಭಾಷೆಯ ಬಗ್ಗೆ ಇದ್ದ ಪ್ರೀತಿ.

                 ಜನ ರಸ್ತೆಗಿಳಿದು ವರ್ಷಾನುಗಟ್ಟಲೆ ಪ್ರತಿಭಟನೆ ನಡೆಸಿದರೂ ಮಹಾದಾಯಿ, ಕಾವೇರಿ ನೀರಿನ ವಿವಾದಗಳಲ್ಲಿ ನಮ್ಮ ಜನರಿಗೆ ಸರ್ಕಾರದ ಸರಿಯಾದ ಬೆಂಬಲ ಸಿಗದೇ ಅನ್ಯಾಯವಾಯಿತು; ಅಂತಹುದರಲ್ಲಿ ಜನ ಏನೂ ಕೇಳದೆ ತಮ್ಮಷ್ಟಕ್ಕೆ ತಾವು ಲಭ್ಯವಿರುವ ಅರಿಶಿನ-ಕುಂಕುಮದ ನಾಡಧ್ವಜವನ್ನು ಬಳಸುತ್ತಾ ನೆಮ್ಮದಿಯಿಂದ ಇರುವಾಗ ಹಟ್ಟಾತ್ತನೆ ಕಾಂಗ್ರೆಸ್ ಮುತುವರ್ಜಿ ವಹಿಸಿ ಇರುವ ಚಂದದ ಧ್ವಜವನ್ನು ಬದಲಿಸಿ ಅದಕ್ಕೆ ಸಂವಿಧಾನದ ಅಡಿಯಲ್ಲಿ ಅಧಿಕೃತವಾಗಿ ಕರ್ನಾಟಕ ರಾಜ್ಯದ ಪ್ರತ್ಯೇಕ ಧ್ವಜವೆಂದು ಘೋಷಿಸುವಂತೆ ಕೇಂದ್ರಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿಬಿಟ್ಟಿತು. ಹಾಗೆ ಮಾಡುವುದರ ಮೂಲಕ ಕರ್ನಾಟಕವನ್ನೂ ಸಹ ಕಾಶ್ಮೀರದಂತೆ ದೇಶದ ಏಕತೆಗೆ ಇನ್ನೊಂದು ತಲೆನೋವು ಎನ್ನುವಂತೆ ಬಿಂಬಿಸಲಾಯಿತು. ಇದರಿಂದ ಇಡೀ ರಾಷ್ಟ್ರಮಟ್ಟದಲ್ಲಿ "ನಾವು ರಾಷ್ಟ್ರಮಟ್ಟದಲ್ಲಿ ಯೋಚಿಸದ ಕುಬ್ಜ ಮನಸ್ಕರು" ಎಂದು ಇತರರಿಂದ ಅವಮಾನವನ್ನೆದುರಿಸಬೇಕಾಯಿತು.

                 ವಾಸ್ತವದಲ್ಲಿ ಕನ್ನಡಿಗರು ರಾಜ್ಯ & ರಾಷ್ಟ್ರ ಎರಡರ ಧ್ವಜಗಳನ್ನು ಸಮಾನವಾಗಿ ಗೌರವಿಸುತ್ತಾ ದೇಶದ ಇತರ ರಾಜ್ಯಗಳೊಂದಿಗೆ ಅನ್ನೋನ್ಯವಾಗಿಯೇ ಇದ್ದರು. ಆದರೆ ನಮ್ಮ ಭಾವನೆಗಳನ್ನು ಬಳಸಿ ಕಾಂಗ್ರೆಸ್ ಪಕ್ಷ ದೇಶದಲ್ಲಿ ಒಡಕುಮೂಡಿಸುವ ಕೆಲಸವನ್ನು ಆರಂಭಿಸಿತು.

                 ನಾವು "ಜಯ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ" ಎನ್ನುವುದರಲ್ಲಿ ವಿಶ್ವಾಸವಿಟ್ಟವರು. ನಮ್ಮ ರಾಜ್ಯದಷ್ಟೇ ಸರಿಯಾಗಿ ದೇಶವನ್ನೂ ಪ್ರೀತಿಸುವವರು. ನಮ್ಮ ಯಾವುದಾದರು ನಡುವಳಿಕೆಯಿಂದ ದೇಶದ ಏಕತೆಗೆ ಧಕ್ಕೆ ಎದುರಾದರೆ ಅದನ್ನು ನಾವಾಗಿಯೇ ತ್ಯಜಿಸಿ ನಮ್ಮ ದೇಶವನ್ನು ಬಿರುಕಿನಿಂದ ಕಾಪಾಡುತ್ತೇವೆ.

                 ರಾಷ್ಟ್ರಧ್ವಜ ನಮ್ಮನ್ನೂ ಪ್ರತಿನಿಧಿಸುತ್ತದೆ, ಹಾಗಾಗಿ ರಾಷ್ಟ್ರದ ಧ್ವಜವೇ ನಮ್ಮ ಧ್ವಜ. ಕರ್ನಾಟಕ ರಾಜ್ಯೋತ್ಸವವನ್ನು ಹೆಮ್ಮೆಯಿಂದ ಆಚರಿಸಲು ರಾಷ್ಟ್ರಧ್ವಜದ ಬದಲಿಗೆ ಬೇರೊಂದು ಧ್ವಜ ಹಿಡಿಯಲೇ ಬೇಕೆನ್ನುವ ನಿಯಮವೇನಿಲ್ಲ. ರಾಜ್ಯದ ದಿನದಂದು ರಾಷ್ಟ್ರದ ಧ್ವಜ ಹಿಡಿದು ಸಂಭ್ರಮಿಸಿದರೆ "ಕನ್ನಡ & ಕನ್ನಡಿಗರು ಬೇರೆಯವರು" ಎನ್ನುವ ಭಾವನೆ ನಮ್ಮ ದೇಶದ ಜನರಿಂದ ದೂರವಾಗಿ ರಾಷ್ಟ್ರ ಮಟ್ಟದಲ್ಲಿ ನಮ್ಮ ಹಿಡಿತವೂ ಹೆಚ್ಚಾಗುತ್ತದೆ ಮತ್ತು ಈ ಮೂಲಕ ಕನ್ನಡದ ಸಂಸ್ಕೃತಿಯನ್ನು ದೇಶದ ಸಂಸ್ಕೃತಿಯೊಂದಿಗೆ ಬೆಸೆಯಲು ಅನುಕೂಲವೂ ಆಗುತ್ತದೆ.

ಜಯ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ :)

ತಮಗೂ, ತಮ್ಮ ಪ್ರೀತಿಪಾತ್ರರಿಗೆಲ್ಲ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು!





ಉಲ್ಲೇಖ/ಹೆಚ್ಚಿನ ಮಾಹಿತಿ:

೧. ಕರುನಾಡಿಗೊಂದು ಹೊಸ ಧ್ವಜ:
https://HalatuHonnu.BlogSpot.com/2018/03/hosa-dhvaja-halatu-honnu.html

೨. ದೃಶ್ಯ(ವೀಡಿಯೊ)ಗಳು:
https://HalatuHonnu.BlogSpot.com/p/videos.html